ಕ್ರೈಮ್
ಗೋಡೆ ಕೊರೆದು 10 ಕೆಜಿ ಬೆಳ್ಳಿ ದೋಚಿದ್ದ ಖದೀಮ ಅರೆಸ್ಟ್; ಮೊದಲ ಕಳ್ಳತನದಲ್ಲೇ ಪೊಲೀಸರ ಬಲೆಗೆ..!

ಬೆಂಗಳೂರು: ನಗರದ ಹಲಸೂರಿನ ಕಾರ್ ಸ್ಟ್ರೀಟ್ನಲ್ಲಿರುವ ಬೆಳ್ಳಿ ಆಭರಣ ಅಂಗಡಿಯ ಗೋಡೆ ಕೊರೆದು ಸುಮಾರು 10 ಕೆಜಿ ಬೆಳ್ಳಿ ಆಭರಣ ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ತೇಜು ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ಸುಮಾರು 5 ಕೆಜಿ ಬೆಳ್ಳಿ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಸುಮಾರು ತಿಂಗಳ ಹಿಂದೆ ನಡೆದಿದ್ದ ಈ ಕಳ್ಳತನಕ್ಕಾಗಿ ಆರೋಪಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಕೃತ್ಯ ಎಸಗಿದ್ದನು. ತನಿಖೆ ವೇಳೆ ಇದು ಆರೋಪಿಯ ಮೊದಲ ಕಳ್ಳತನದ ಪ್ರಯತ್ನವೇ ಆಗಿದ್ದು, ಅದೇ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಉಳಿದ ಬೆಳ್ಳಿ ಆಭರಣಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



