ಓಂ ನಮಃ ಶಿವಾಯ; ಚಿನ್ನದ ಉಂಗುರು ಮಾಯ..!

ನಾಗಾಸಾಧುಗಳ ವೇಷದಲ್ಲಿ ವಂಚನೆ: ಆಶೀರ್ವಾದದ ನೆಪದಲ್ಲಿ ಚಿನ್ನದ ಉಂಗುರ ಎಗರಿಸಿದ ವಂಚಕರು…!??
ಬೆಂಗಳೂರು: ನಾಗಾಸಾಧುಗಳ ವೇಷ ಧರಿಸಿ ವ್ಯಕ್ತಿಯೊಬ್ಬರ ವಿಶ್ವಾಸ ಗಳಿಸಿದ ಇಬ್ಬರು ವಂಚಕರು ಆಶೀರ್ವಾದ ಮಾಡುವ ನೆಪದಲ್ಲಿ ಚಿನ್ನದ ಉಂಗುರ ಕಳವು ಮಾಡಿ ಪರಾರಿಯಾದ ಘಟನೆ ನಗರದ ವಿಜಯನಗರದ ಆರ್ಪಿಸಿ ಲೇಔಟ್ನಲ್ಲಿ ನಡೆದಿದೆ.

ಅರುಣ್ ಶ್ರೀಪಾದ್ ಎಂಬುವರು ವಂಚನೆಗೆ ಒಳಗಾದವರು. ಕಾಶಿ, ಅಯೋಧ್ಯೆ ಹಾಗೂ ಗಂಗಾಸ್ನಾನದ ಕುರಿತು ಮಾತನಾಡುತ್ತಾ ಅವರ ಬಳಿ ಬಂದ ಇಬ್ಬರು ವೇಷಧಾರಿಗಳು ತಾವು ಸಾಧುಗಳೆಂದು ನಂಬಿಕೆ ಮೂಡಿಸಿದ್ದಾರೆ ಎನ್ನಲಾಗಿದೆ.
ಬಳಿಕ ಆಶೀರ್ವಾದ ನೀಡುವುದಾಗಿ ಹೇಳಿ ವಿಭೂತಿ ಹಚ್ಚಿ, ಹಣೆಯ ಮೇಲೆ ಸಣ್ಣ ತ್ರಿಶೂಲವಿಟ್ಟು ಮಂತ್ರ ಪಠಿಸಿದ್ದಾರೆ. ಈ ವೇಳೆ ಅರುಣ್ ಶ್ರೀಪಾದ್ ಅವರ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಚಾಕಚಕ್ಯತೆಯಿಂದ ಕಳವು ಮಾಡಿ ಅಲ್ಲಿಂದ ತೆರಳಿದ್ದಾರೆ.
ವಂಚಕರು ತೆರಳಿದ ಬಳಿಕವೂ ಉಂಗುರ ಕಳುವಾಗಿರುವುದು ಗಮನಕ್ಕೆ ಬಂದಿರಲಿಲ್ಲ. ಮನೆಗೆ ತಲುಪಿದ ನಂತರ ಕೈಯಲ್ಲಿದ್ದ ಉಂಗುರ ಕಾಣೆಯಾಗಿರುವುದು ಗೊತ್ತಾಗಿ ಅವರು ಬೆಚ್ಚಿಬಿದ್ದಿದ್ದಾರೆ.
ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.



