ಕರ್ತವ್ಯಕ್ಕೆ ಹೊರಟಿದ್ದ ಎಎಸ್ಐಗೆ ಮಾರ್ಗಮಧ್ಯೆ ಹೃದಯಾಘಾತ… ಹೊಸ ಠಾಣೆಗೆ ಸೇರುವ ಮುನ್ನವೇ ಜೀವನಯಾನ ಅಂತ್ಯ!

ಬಾಗಲಕೋಟೆ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಇಲಾಖೆಯ ಎಎಸ್ಐ ಅಲ್ಲಾಭಕ್ಷ ಕರೋಶಿ (54) ಅವರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಗದ್ದನಕೇರಿ ಗ್ರಾಮದ ನಿವಾಸಿಯಾಗಿದ್ದ ಅಲ್ಲಾಭಕ್ಷ ಕರೋಶಿ ಅವರು ಇತ್ತೀಚೆಗೆ ಬೀಳಗಿ ಪೊಲೀಸ್ ಠಾಣೆಯಿಂದ ಬಾಗಲಕೋಟೆ ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ಇಂದು ಹೊಸ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಹೊರಟಿದ್ದ ವೇಳೆ ಏಕಾಏಕಿ ಹೃದಯಾಘಾತಕ್ಕೊಳಗಾಗಿ ರಸ್ತೆಯಲ್ಲೇ ಕುಸಿದು ಬಿದ್ದರು.
ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಬಳಿಕ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದ್ದು, ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದರು.
ಅಲ್ಲಾಭಕ್ಷ ಕರೋಶಿ ಅವರು ಪ್ರಾಮಾಣಿಕ, ಕರ್ತವ್ಯನಿಷ್ಠ ಹಾಗೂ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದರು. ಹಲವು ವರ್ಷಗಳ ಸೇವೆಯಲ್ಲಿ ಸಹೋದ್ಯೋಗಿಗಳ ಗೌರವ ಗಳಿಸಿದ್ದ ಅವರು, ಹೊಸ ಠಾಣೆಯಲ್ಲಿ ಕರ್ತವ್ಯ ಆರಂಭಿಸುವ ಮುನ್ನವೇ ವಿಧಿಯಾಟಕ್ಕೆ ಬಲಿಯಾಗಿರುವುದು ಕುಟುಂಬಸ್ಥರು ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಶೋಕ ಮೂಡಿಸಿದೆ.



